ಆಗಿಯ ಹುಣ್ಣೆಮೆ ಹೋದ
ಮಿಗೆ ೩ ದಿನಕ್ಕೆ,
ಮೃಗಧರನ ಕೂಡ,
ಮೃಗವಿರಲು ಮಳೆಗಾಲ ಜಗದಣಿಯಲಕ್ಕು ಸರ್ವಜ್ಞ.
ಮಳೆಗಾಲದ ಕುರಿತು ಸರ್ವಜ್ಞ ಹೀಗೆ ಹೇಳಿದ್ದಾರೆ. ನಿಜಕ್ಕೂ ಮಳೆ ಒಂದು ಅದ್ಭುತ ಪ್ರಾಕೃತಿಕ ಶಕ್ತಿ. ಇಳೆಗೆ ಜೀವ ಪೋಷಕ. ಇದಕ್ಕೇ ಮಳೆಯ ಕಲ್ಪನೆ, ನಂಬಿಕೆಯೂ ವಿಶಿಷ್ಟ. ಮಳೆಗೆ ಪೂಜ್ಯ ಸ್ಥಾನವೂ ಇದೆ. ಮಳೆ ಸುರಿಯುವಂತೆ ಕೈಗೊಳ್ಳುವ ಹಬ್ಬಗಳಲ್ಲೂ ಪ್ರಾದೇಶಿಕ ವೈವಿಧ್ಯ. ಕೃಷಿಕರು, ಗ್ರಾಮೀಣ ಜನರು ಮಳೆಯ ವಿವರಣೆ ಕೊಡುವ ಶೈಲಿಯೂ ಬೇರೆ.
ಕನ್ಯಾ ತಿಂಗಳ ಮಳೆ ಕಂಡಲ್ಲಿ ಹೊಯ್ಯುದ್ರೆ, ಆರಿದ್ರೆ ಮಳೆ ಆರದಂತೆ ಹೊಯ್ಯುತ್ತದೆ. ಮಗೆ ಮಳೆ ಮೊಗೆ ಮೊಗೆದು ಹೊಯ್ಯುತ್ತೆ. ಹುಬ್ಬೆ ಮಳೆ ಹೊಯ್ದರೆ ಅಬ್ಬೆ ಮೊಲೆಹಾಲು ಉಂಡಷ್ಟು ಒಳ್ಳೆದು. ಸ್ವಾತಿ ಮಳೆ ಹೊಯ್ದರೆ ಸಮುದ್ರದಲ್ಲಿ ಮುತ್ತು ಬೆಳೀತು. ಹೀಗೆ ಬಗೆಬಗೆಯಾಗಿ ಮಳೆಯನ್ನು ಗಾದೆ ಮಾತಲ್ಲಿ ಹೇಳುತ್ತಾರೆ. ಆಯಾ ನಕ್ಷತ್ರದ ಮಳೆ ಹೇಗೆ ಎಂಬುದನ್ನು ಅರಿಯಲು ಒಂದು ಗಾದೆ ಸಾಕು. ಒಂದೊಂದು ಮಳೆಗೂ ಒಂದು ಗುಣಲಕ್ಷಣ.
ಅಸಲೆ(ಆಶ್ಲೇಷಾ) ಮಳೆಗೆ ಹಂಚಿನ ಮೇಲೆಲ್ಲ ಹುಲ್ಲು, ಭರಣಿ ಸುರದ್ರೆ ಭರಗಾಲದ ಭಯವಿಲ್ಲ, ಭರಣಿ ಹುಯ್ದರೆ ಧರಣೆಲ್ಲ ಬೆಳೆ.
ಸ್ವಾತಿ ಚೇತನ :ಸ್ವಾತಿಯ ಮಳೆ ಹೋದ ಮ್ಯಾಗ ಐತೇನು?, ಚಿತ್ತಿ, ಸ್ವಾತಿ ಆದ್ರೆ ಹಿಂಗಾರಿ ಬೆಳೆ ಬಂಗಾರ್ದಂಗೆ, ಸ್ವಾತಿ ಮಳೆಯಾದ್ರೆ ಹುಲ್ಲೂ ಹೊಡೆ, ಸ್ವಾತಿ ಮಳೆಯಾದ್ರೆ ಚಾಪೆ ಕೆಳಗಿನದೂ ತೆನೆಯಾಗ್ತದೆ. ಸ್ವಾತಿ ಮಳೆ ಹೇಗೆ ಆರ್ಭಟಿಸುತ್ತದೆ ಎಂಬುದಕ್ಕೆ: ಸ್ವಾತಿ ಮಳೆ ಹೊರಗೆ ಹೋಗಿ ಹೇಲೋಕೂ ಬಿಡೋದಿಲ್ಲ.
ಹಸ್ತಾ ಮಳೆ ಸಮೃದ್ಧಿ :ಈ ಮಳೆ ಸುರಿಯದಿದ್ದರೆ ಕಷ್ಟ ತಪ್ಪಿದ್ದಲ್ಲ ಎಂಬ ಮಾತು ಇದೆ. ಹಸ್ತ ಮಳೆ ಆಗದಿದ್ರೆ ಹಲ್ಲು ಕಿಸ್ತಾ, ಹಸ್ತದ ಮಳೆ ಆಗದಿದ್ದರೆ ಹೆತ್ತ ತಾಯಿ ಹಿಟ್ಟು ಕೊಡಲ್ಲ ಎನ್ನುತ್ತಾರೆ.
ಹಸ್ತಾ ಮಳೆಯ ರೈತ ಮಿತ್ರ ಎಂಬ ನಂಬಿಕೆ. ಈ ಮಳೆ ರೈತನ ಕೈ ಹಿಡಿಯುತ್ತದೆ. ಹಸ್ತಾ ಕೈ ಭಾಷೆ ಕೊಟ್ಟಿದೆ ಎನ್ನುತ್ತಾರೆ ರೈತರು. ಮನ ಬಂದಂತೆ ಬೀಳುವ ಮಳೆ ಚಿತ್ತಾ. ಅದಕ್ಕೆ ಕುರುಡು ಚಿತ್ತೆ ಎನ್ನುತ್ತಾರೆ. ಅಣ್ಣನ ಮನೆಲಿ ಚಿತ್ತೆ ಬಿದ್ರೆ ತಮ್ಮನ ಮನೆಯಲ್ಲಿ ಬೀಳುವುದಿಲ್ಲವಂತೆ.
ಉತ್ತರ ಮಳೆ ಬಂದ್ರೆ ಬಿತ್ತಿದ್ದೆಲ್ಲಾ ಫಲ, ಉತ್ರೆ ಮಳೆಗೆ ಹುಟ್ಟ ಹುಲ್ಲೆಲ್ಲ ಹೊಡೆ.
ಮೃಗಸಿರಿ ಮಳೆಗೆ ಮಿಕ್ಪಕ್ಕದ್ದೆಲ್ಲ ಚೆಲ್ಲಬೇಕು ಎನ್ನುತ್ತಾರೆ. ಅದಕ್ಕೇ ಮೃಗಶಿರಾ ಮಳೆಯಲ್ಲಿ ಕೃಷಿಕರು ಸಸಿ, ಗಿಡಗಳನ್ನು ಹೆಚ್ಚು ನಾಟಿ ಮಾಡುತ್ತಾರೆ. ಆರಿದ್ರಿ ಮಳೆಲಿ ಹಚ್ಚಿದರೆ ಆರುಕಾಯಿ ಹೆಚ್ಚು, ಅಶ್ವಿನಿ ಮಳೆಗೆ ಆರುಕಟ್ಟು, ಭರಣಿ ಮಳೆಗೆ ಬೀಜ ಬಿತ್ತು ಎನ್ನೋದು. ಕುಲ್ಡನ ಮಳೆಗೆ ಕಲ್ಲಂಗ್ಡಿ ಊರಿದ್ರೆ ಉಲ್ಡುಲ್ಡಿ ಕಾಯಿ ಬಿಡ್ತವೆ ಎನ್ನೋ ನಂಬಿಕೆ.
ಉಬ್ಬೆ ಮಳೇಲಿ ಮೋಡ ಉಬ್ಬುಬ್ಬಿ ಬರುತ್ತೆ ಎಂಬ ಮಾತು. ಮಗೆ ಮಳೆ ನಂಜಿನ ಮಳೆ. ತುಂಬಾ ಮಳೆಯಾದ್ರೆ ನಾಟಿ ಮಾಡಿದ ಸಸಿಗಳು ಕೊಳೆಯುತ್ತವೆ.
ಮಳೆಯೇ ಇಲ್ಲವಾದ್ರೆ: ಮಳೆ ಇಲ್ಲದ ಪೈರು ಮಾತು ಇಲ್ಲದ ಕೂಸು ಸಮ ಎನ್ನುತ್ತಾರೆ.
ಕೆಲವು ಮಳೆಗಳು ಅಕಾಲದಲ್ಲಿ ಸುರಿದು ಬೆಳೆ ಹಾಳು ಮಾಡುತ್ತದೆ. ಅಂತಹ ಮಳೆತಿ ಮೆದೆಗೆಡುಕ ಕಣಗೆಡುಕ.
ಭಾರೀ ಮಳೆ ಬಂತು ಎನ್ನಿ, ಆವಾಗ ಏನಪ್ಪಾ ಮಳೆ... ಹೇಳೋದು ಸಾಮಾನ್ಯ. ಅದಕ್ಕೆ- ‘ಮಳೆ ಬಂದರೆ ಕೇಡೇ, ಮಗ ಉಂಡ್ರೆ ಕೇಡೇ’. ಮಗ ಊಟ ಮಾಡಿದ್ರೆ ತೊಂದ್ರೆ ಆಗುತ್ಯೇ? ಹಾಗೇ ಮಳೆ ಹೊಯ್ದರೆ ಕೇಡು ಆಗುವುದುಂಟೇ ಎಂದು ಹೇಳುತ್ತಾರೆ.
ಬೆಳಗ್ಗೆ ಬಂದ ನೆಂಟ ರಾತ್ರಿವರೆಗೆ ಇರುವುದಿಲ್ಲ ಎಂದೂ ಸಂಜೆ ಬಂದ ಮಳೆ ಮತ್ತು ನೆಂಟ್ರು ಬೇಗನೆ ಹೋಗುವುದಿಲ್ಲ ಎಂಬ ವಾಡಿಕೆಯೂ ಇದೆ.
ಮಳೆ ಮುನ್ಸೂಚನೆ :ಮುಂಗಾರು ಕೇರಳ ಪ್ರವೇಶಿಸಿದೆ, ಬಂಗಾಳಕೊಲ್ಲಿ ಪ್ರವೇಶಿಸಿದೆ ಇನ್ನೇನು ವಾರದಲ್ಲಿ ಇಲ್ಲಿಗೆ ಬರುತ್ತದೆ ಎಂದು ಈಗ ಹವಾಮಾನ ತಜ್ಞರು ಸಾಧ್ಯತೆಯ ವರದಿ ನೀಡುತ್ತಾರೆ. ಹಾಗಾದ್ರೆ ಮೊದಲು ಮಳೆ ಮುನ್ಸೂಚನೆ ಯಾರು ಕೊಡ್ತಿದ್ರು?
ಮಲೆನಾಡಿನಲ್ಲಿ ಒಂದು ಜಾತಿಯ ಇರುವೆ ರೆಕ್ಕೆ ಪಡೆದು ಭೂಮಿಯಿಂದ ಹೊರಕ್ಕೆ ಬರುತ್ತದೆ. ಎಷ್ಟೆಂದರೆ ಆ ಪ್ರದೇಶದಲ್ಲಿ ಮಾಮೂಲಿಯಾಗಿ ಓಡಾಡಲು ಸಾಧ್ಯವಾಗುವುದಿಲ್ಲ. ಮುಖ, ಮೈಗೆ ಮುತ್ತಿಕೊಳ್ಳುತ್ತವೆ. ಇದು ಕೂಡಾ ಮಳೆಯ ಮುನ್ಸೂಚನೆ. ಇನ್ನು ಕಿಟ್ರ್ರ್..... ಎಂದು ಕೂಗುವ ಮಳೆ ಜಿರಲೆ ಪ್ರತ್ಯಕ್ಷವಾಗುವುದು ಮಳೆಯ ಮುನ್ಸೂಚನೆ. ಮಳೆಗಾಲದ ಆರಂಭದಲ್ಲಿ ಮಾತ್ರ ಕೂಗಿ ಕೂಗಿ ಮಳೆ ಕರೆದು ತನ್ನ ಕಾರ್ಯ ಪೂರ್ತಿಗೊಳಿಸುತ್ತದೆ ಈ ಮಳೆ ಜಿರಲೆ. ಆರ್ಕಿಡ್ ಜಾತಿಯ(ಪರಾವಲಂಬಿ ಸಸ್ಯ) ಸೀತಾಳೆ ಹೂವು ಮರದ ಮೇಲೆ ಬಿಡುವುದು, ಚಳ್ಳೆ ಹಣ್ಣು ಬಿಡುವುದು, ಕಾಗೆ ಕೂಗುತ್ತ ಊರು ಸುತ್ತಿದ್ರೆ ಮಳೆ ಬರುತ್ತದೆ ಎಂಬ ಮುನ್ಸೂಚನೆ.
ಕುಂಡ ಬೆಳಕು ಮರದ ತುದಿ ಏರಿದ್ರೆ ಮಳೆಗಾಲ ಆರಂಭ ಎಂಬ ಇನ್ನೊಂದು ಮಾತಿದೆ. ಕುಂಡ ಬೆಳಕು ಅಂದ್ರೆ ಕುಂಡೆ ಭಾಗದಲ್ಲಿ ಬೆಳಕು ಸೂಸುವ ಒಂದು ಜಾತಿ ಹುಳು. ಮಲೆನಾಡಿನಲ್ಲಿ ಇವು ಮಳೆಗಾಲದ ಆರಂಭದಲ್ಲಿ ಕಂಡಬರುತ್ತವೆ. ಈ ಹುಳುಗಳು ಬೆಳಕು ಸೂಸುತ್ತ ಮರದ ತುದಿಯ ವರೆಗೆ ಹಾರಾಡಿದ್ರೆ ಮಳೆಗಾಲ ಶುರುವಾಗಿದೆ ಎಂದೇ ಅರ್ಥ.
ಗುಬ್ಬಿ ಮಣ್ಣು ಸ್ನಾನ ಮಾಡಿದ್ರೆ, ಎತ್ತು ತಂಪು ಹೊತ್ತಿನಲ್ಲಿ ಕತ್ತು ಎತ್ತಿ ಆಕಾಶ ಮೋಡಿದ್ರೆ, ಮುಸ್ಸಂಜೆಯಲ್ಲಿ ಗೂಬೆ ಕೂಗಿದ್ರೆ, ಬೆಕ್ಕು ಮುಖ ತೊಳಿದ್ರೆ, ಕಪ್ಪೆ ಎಡೆಬಿಡದೆ ಒಟ ಗುಟ್ಟಿದ್ರೆ ಕೂಡಾ ಮಳೆಯ ಮುನ್ಸೂಚನೆ ಎಂದು ಬಗೆಯುತ್ತಾರೆ. ಡಾಂಕ್ರರ್ ಕಪ್ಪೆ(ದೊಡ್ಡ ಕಪ್ಪೆ) ಡ್ರಾಂಕ್.. ಡ್ರಾಂಕ್... ಎಂದು ಸಾಮೂಹಿಕವಾಗಿ ಕೂಗುತ್ತಿದ್ದರೆ ಅದು ಮಳೆ ಕರೆಯುತ್ತಿದೆ ಎಂಬ ಭಾವನೆ.
ಮುಗೀತಾ ಮಳೆಗಾಲ? :ಚಂದ್ರನ ಸುತ್ತ ಮಂಡಲ ಬಂದ್ರೆ, ಬೆಳಗ್ಗೆ ಇಬ್ಬನಿ ಹೆಚ್ಚಿಗೆ ಬಿದ್ರೆ, ಎರಡು ಕಾಮನಬಿಲ್ಲು ಕಟ್ಟಿದ್ರೆ ಮಳೆಗಾಲ ಮುಗಿತು ಎಂಬ ನಂಬಿಕೆ.
ಒಟ್ಟು ೨೭ ಮಳೆ ನಕ್ಷತ್ರಗಳಿವೆ. ಅವು, ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ, ಮೃಗಶಿರಾ, ಆರಿದ್ರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಮಗಾ, ಹುಬ್ಬಾ, ಉತ್ತರಾ, ಹಸ್ತ, ಚಿತ್ತ, ಸ್ವಾತಿ, ವಿಶಾಖಾ, ಅನುರಾಧಾ, ಜೇಷ್ಠ, ಮೂಲ, ಪೂರ್ವಾಷಾಢ, ಉತ್ತರಾಷಾಢ, ಶ್ರವಣ, ಧನಿಷ್ಠ, ಶತಭಿತ, ಪೂರ್ವಾಭಾದ್ರ, ಉತ್ತರಾಭಾದ್ರ, ರೇವತಿ. ಎಲ್ಲ ನಕ್ಷತ್ರಗಳೂ ಮಳೆ ಸುರಿಸುವುದಿಲ್ಲ.
2 comments:
ಫೋಟೋ ತುಂಬ ಚೆನ್ನಾಗಿದೆ . . ಮತ್ತೆ ಮತ್ತೆ ನೋಡಬೇಕೆನಿಸುತ್ತದೆ.
ಭಾವಚಿತ್ರ ತು೦ಬ ಚೆನ್ನಗಿದೆ. ಚೆನ್ನಾಗಿ ತೆಗೆದಿದ್ದೀರ. ಮು೦ದುವರೆಸಿ.
Post a Comment