Wednesday, May 6, 2009

ಅಂಚೆ ಚೀಟಿಯಲ್ಲಿ ಕೃಷಿಲೋಕ



ಅಂಚೆ ಚೀಟಿಯಲ್ಲಿ ದೇಶದ ಕೃಷಿಯ ಆಗುಹೋಗುಗಳ ಸ್ಥೂಲನೋಟ ಸಾಧ್ಯ. ಇಲ್ಲಿದೆ ಅಂತಹ ಕಿರು ಪ್ರಯತ್ನ.

  • ಮೊದಲ ಕೃಷಿ ಅಂಚೆ ಚೀಟಿ: ಸ್ವತಂತ್ರ್ಯಾನಂತರ ೧೯೫೦ರಲ್ಲಿ ದೇಶದಲ್ಲಿ ಮೊದಲ ಬಾರಿ ಕೃಷಿಗೆ ಸಂಬಂಧಿಸಿದ ಸ್ಟ್ಯಾಂಪ್ ಬಿಡುಗಡೆಯಾಯಿತು. ತೆನೆ, ನೇಗಿಲು ಮತ್ತು ನೀರೀಕ್ಷೆಯಿಂದ ಮೇಲೆ ನೋಡುತ್ತಿರುವ ಪುರುಷ- ಸ್ತ್ರೀ ಚಿತ್ರ ಇದರಲ್ಲಿದೆ. ಈ ಅಂಚೆ ಚೀಟಿ ಮೌಲ್ಯ ೪ ಅಣೆ. ನಮ್ಮದು ಕೃಷಿ ಪ್ರಧಾನ ದೇಶ ಹಾಗೂ ಕೃಷಿಯಲ್ಲಿ ಇನ್ನೂ ಸಾಧನೆ ಮಾಡಬೇಕು ಎಂಬ ಸಂದೇಶ ಈ ಅಂಚೆ ಚೀಟಿಯದ್ದು. ಜನವರಿ ೨೬ ೧೯೫೦ರಲ್ಲಿ ಬಿಡುಗಡೆಯಾಯಿತು.

  • ದೆಹಲಿಯಲ್ಲಿ ಮೊದಲ ವಿಶ್ವ ಕೃಷಿ ಸಮ್ಮೇಳನ ೩೦ ಡಿಸೆಂಬರ್ ೧೯೫೮ರಲ್ಲಿ ನಡೆಯಿತು. ದೇಶದ ಕೃಷಿ ಜೀವನ ಈ ಸಮ್ಮೇಳನದಲ್ಲಿ ಬಿಂಬಿತವಾಗಿತ್ತು. ಈ ಸಮ್ಮೇಳನ ಸ್ಮರಣಾರ್ಥ ಜೋಡಿ ಎತ್ತಿಗೆ ಕಟ್ಟಿದ ನೇಗಿಲಿನಿಂದ ಊಳುತ್ತಿರುವ ರೈತನ ಚಿತ್ರದ ಅಂಚೆ ಚೀಟಿ ಬಿಡುಗಡೆ ಮಾಡಲಾಗಿದೆ. ಇದರ ಮೌಲ್ಯ ೧೫ ಪೈಸೆ.

  • ಜೈ ಕಿಸಾನ್: ಲಾಲ್‌ಬಹಾದೂರ್ ಶಾಸ್ತ್ರಿ ಅವರ ಜೈ ಕಿಸಾನ್, ಜೈ ಜವಾನ್ ಘೋಷಣೆಯ ಮೇಲೆ ಅಂಚೆ ಚೀಟಿ ತರಲಾಗಿದೆ. ಶಾಸ್ತ್ರಿ ಅವರ ಮೊದಲ ಪುಣ್ಯತಿಥಿಯಂದು ಜೈ ಕಿಸಾನ್ ಅಂಚೆ ಚೀಟಿ ಬಿಡುಗಡೆಯಾಯಿತು. ೧೭ ಜನವರಿ ೧೯೬೭ರಲ್ಲಿ ಬಿಡುಗಡೆಯಾದ ಈ ಅಂಚೆ ಚೀಟಿ ಮೌಲ್ಯ ೧೫ ಪೈಸೆ. ಪೈರು ಕೊಯ್ಯುತ್ತಿರುವ ರೈತರ ಚಿತ್ರ ಇದರಲ್ಲಿದೆ.
    ೪ನೇ ಪಂಚ ವಾರ್ಷಿಕ ಯೋಜನೆಯಲ್ಲಿ ಕೃಷಿಗೆ ಆಧ್ಯತೆ ನೀಡಲಾಗಿತ್ತು. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶವನ್ನು ಅಂಚೆ ಚೀಟಿ ಬಿಂಬಿಸುತ್ತದೆ. ಅಂದು ಇದ್ದ ೧೨೦ ಮಿಲಿಯನ್ ಟನ್ ನಷ್ಟು ಆಹಾರ ಉತ್ಪಾದನೆಯನ್ನು ೧೯೭೦ -೭೧ರ ವೇಳೆಯಲ್ಲಿ ಹೆಚ್ಚುವರಿಯಾಗಿ ೩೦ ಮಿಲಿಯನ್ ಟನ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿತ್ತು ಎಂದು ಜೈಕಿಸಾನ್ ಅಂಚೆ ಚೀಟಿಯ ಲೀಪ್‌ಲೆಟ್‌ನಲ್ಲಿ ಹೇಳಲಾಗಿದೆ.

  • ೧೯೫೧ರಿಂದ ೧೯೬೮ರ ಅವಧಿಯಲ್ಲಿ ದೇಶದಲ್ಲಾದ ಗೋಧಿ ಕ್ರಾಂತಿ ನಿಮಿತ್ತ ೧೯೬೮ ಜುಲೈ ೧೭ರಂದು ಅಂಚೆ ಚೀಟಿ ಬಿಡುಗಡೆ ಮಾಡಲಾಗಿದೆ. ೨೦ ಪೈಸೆ ಇದರ ಬೆಲೆ.

  • ಆಧುನಿಕ ನೇಗಿಲು :ದೇಶಕ್ಕೆ ಆಧುನಿಕ ಕಬ್ಬಿಣದ ನೇಗಿಲು ಪರಿಚಯಿಸಿದವರು ಲಕ್ಷ್ಮಣರಾವ್ ಕಿರ್ಲೋಸ್ಕರ್. ಅವರು ಕರ್ನಾಟಕದ ಬೆಳಗಾವಿಯವರು. ಕಿರ್ಲೋಸ್ಕರ್ ಗ್ರುಪ್‌ನ ಮೊದಲ ಉತ್ಪನ್ನ ಮೈಕಾನೈಸ್ಡ್ ನೇಗಿಲು. ಲಕ್ಷ್ಮಣರಾವ್ ಅವರ ಜನ್ಮ ಶತಾಬ್ದಿ ನಿಮಿತ್ತ ೨೦ ಜೂನ್ ೧೯೬೯ರಲ್ಲಿ ಲಕ್ಷ್ಮಣರಾವ್ ಕಿರ್ಲೋಸ್ಕರ್ ಫೋಟೋ ಮತ್ತು ಅವರು ಸಂಶೋಧಿಸಿದ ನೇಗಿಲಿನ ರೇಖಾ ಚಿತ್ರದ ಅಂಚೆ ಚೀಟಿ ಮುದ್ರಿತವಾಗಿದೆ. ಮೌಲ್ಯ ೨೦ ಪೈಸೆ.

  • ನೀರಾವರಿ ಕಮಿಷನ್‌ನ ೨೫ನೇ ವಾರ್ಷಿಕ ದಿನ ಅಂಗವಾಗಿ ೧೯೭೫ರಲ್ಲಿ ಅಂಚೆ ಚೀಟಿ ಮುದ್ರಿಸಲಾಗಿದೆ. ಮೌಲ್ಯ ೨೫ ಪೈಸೆ.

  • ೧೯೭೬ ಡಿಸೆಂಬರ್ ೨೭ರಂದು ಹೈಬ್ರಿಡ್ ತೆಂಗಿನ ತಳಿಯ ಅಂಚೆ ಚೀಟಿ ಬಿಡುಗಡೆಯಾಗಿದೆ. ಡೈಮಂಡ್ ಜುಬ್ಲಿ ಆಫ್ ಕೋಕೋನಟ್ ರಿಸರ್ಚ್‌ನ ಸ್ಮರಣಾರ್ಥ ಇದನ್ನು ಮುದ್ರಿಸಲಾಗಿದೆ. ಬೆಲೆ ೨೫ ಪೈಸೆ.


  • ೧೯೭೭ರಲ್ಲಿ ನವ ದೆಹಲಿಯ ಪ್ರಗತಿ ಮೈದಾನದಲ್ಲಿ ಕೃಷಿ ವಸ್ತು ಪ್ರದರ್ಶನ ನಡೆದಿತ್ತು. ಇದರ ಅಂಗವಾಗಿ ೧೩ ನವೆಂಬರ್ ೧೯೭೭ರಲ್ಲಿ ಗೋಧಿಯ ತೆನೆಯ ಚಿತ್ರವಿರುವ ಅಂಚೆ ಚೀಟಿ ಬಿಡುಗಡೆಯಾಗಿದೆ. ಪ್ರದರ್ಶನದಲ್ಲಿ ಅಪ್ಘಾನಿಸ್ಥಾನ, ಹಂಗೇರಿ, ಜಪಾನ್, ಯುಎಸ್‌ಎಸ್‌ಆರ್ ಇನ್ನಿತರ ದೇಶಗಳು ಪಾಲ್ಗೊಂಡಿದ್ದವು. ಅಂಚೆ ಚೀಟಿ ಮೌಲ್ಯ ೨೫ ಪೈಸೆ.


  • ೫ನೇ ಅಂತಾರಾಷ್ಟ್ರೀಯ ಗೋಧಿ ತಳಿ ವಿಚಾರ ಸಂಕಿರಣ ದೆಹಲಿಯಲ್ಲಿ ನಡೆಯಿತು. ಇದರ ಅಂಗವಾಗಿ ಗೋಧಿ, ಜಗತ್ತು ಮತ್ತು ಡಿಎನ್‌ಎ ವಿಷಯದೊಂದಿಗೆ ೨೩ ಫೆಬ್ರವರಿ ೧೯೭೭ ರಂದು ೨೫ ಪೈಸೆ ಬೆಲೆಯ ಅಂಚೆ ಚೀಟಿ ಬಿಡುಗಡೆಯಾಗಿದೆ.


  • ೧೯೮೦-೮೧ನೇ ಸಾಲಿನಲ್ಲಿ ಉಳುಮೆ, ಟ್ರಾಕ್ಟರ್, ಮಾವು, ಸೇಬು, ಗೇರು, ನೀರಾವರಿ, ಹಾಲು ಉತ್ಪಾದನೆ, ಕೃಷಿ ಮತ್ತು ತಂತ್ರಜ್ಞಾನ, ಹತ್ತಿ, ರಬ್ಬರ್ ತೆಗೆಯುವುದು ಸೇರಿದಂತೆ ಇತರ ವಿಷಯಗಳ ಅಂಚೆ ಚೀಟಿಯ ಸರಣಿ ಬಿಡುಗಡೆಯಾಗಿದೆ.


  • ವಿಶ್ವ ಆಹಾರ ದಿನದ ಸಂಕೇತವಾಗಿ ೧೯೮೧ ಅಕ್ಟೋಬರ್ ೧೬ರಂದು ಅಂಚೆ ಚೀಟಿ ಪ್ರಕಟಿಸಲಾಗಿದೆ. ಮೌಲ್ಯ ೧ ರುಪಾಯಿ.


  • ಭಾರತದಲ್ಲಿ ಬಟಾಟೆ ತಳಿಯ ಸಂಶೋಧನೆಯ ೫೦ನೇ ವರ್ಷದ(೧೯೩೫- ೧೯೮೫) ಅಂಗವಾಗಿ ೫೦ ಪೈಸೆ ಬೆಲೆಯ ಅಂಚೆ ಚೀಟಿ ೧೯೮೫ ಏಪ್ರೀಲ್ ೧ರಂದು ಬಿಡುಗಡೆಯಾಗಿದೆ.


  • ೧೯೯೦ ಜುಲೈ ೩೧ರಂದು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರೀಸರ್ಚ್‌ನ ೬೦ನೇ ವರ್ಷದ ಅಂಗವಾಗಿ ಅಂಚೆ ಚೀಟಿ ಪ್ರಕಟಿಸಲಾಗಿದೆ. ಮೌಲ್ಯ ೨ ರುಪಾಯಿ.


  • ೧೯೯೨ ಡಿಸೆಂಬರ್ ೨೨ರಂದು ಹರ್‍ಯಾಣ ರಾಜ್ಯದ ಸಿಲ್ವರ್ ಜುಬ್ಲಿ ಅಂಗವಾಗಿ ಅಂಚೆ ಚೀಟಿ ಪ್ರಕಟಿಸಲಾಗಿದೆ. ವಿದ್ಯುತ್, ರೈತ ಮತ್ತು ಬೆಳೆಯ ವಿಷಯ ಅಂಚೆ ಚೀಟಿಯದ್ದು. ಬೆಲೆ ೨ ರುಪಾಯಿ.


  • ೧೯೯೩ ಮಾರ್ಚ್ ೨೬ರಂದು ಯುನೈಟೆಡ್ ಪ್ಲಾಂಟರ್‍ಸ್ ಅಸೋಸಿಯೇಷನ್ ಆಫ್ ಸೌಥ್ ಇಂಡಿಯಾದ ಶತಮಾನೋತ್ಸವ ಅಂಚೆ ಚೀಟಿ ಬಿಡುಗಡೆಯಾಗಿದೆ. ಬೆಲೆ ೨ ರು.


  • ‘ಈಯರ್ ಇಂಡಿಯನ್ ಟೀ’ ವಿಷಯದಲ್ಲಿ ಟೀ ಎಲೆ ಮತ್ತು ಎಲೆ ಕೊಯ್ಯುವ ವಿಷಯದ ಅಂಚೆ ಚೀಟಿ ೧೯೯೩ ಡಿಸೆಂಬರ್ ೧೧ರಂದು ಬಿಡುಗಡೆಯಾಗಿದೆ. ಬೆಲೆ ೬ ರುಪಾಯಿ.


  • ‘ವೀಟ್ ಸೀಡ್ ಇನ್ ಎ ಟೆಸ್ಟ್ ಟ್ಯೂಬ್(ಡಿನ್‌ಎ ಟ್ರೀಟೆಡ್)’ನ ಅಂಚೆ ನವದೆಹಲಿಯಲ್ಲಿ ೧೯೯೬ ಡಿಸೆಂಬರ್ ೪ ರಂದು ನಡೆದ ೨ನೇ ಅಂತಾರಾಷ್ಟ್ರೀಯ ಕ್ರಾಪ್ ಸೈನ್ಸ್ ಕಾಂಗ್ರೆಸ್‌ನಲ್ಲಿ ಬಿಡುಗಡೆಯಾಗಿದೆ. ಬೆಲೆ ೨ ರುಪಾಯಿ.


  • ರೈತ ಪರ ಹೋರಾಟಗಾರ, ಕೇಂದ್ರ ಮಂತ್ರಿಯಾಗಿದ್ದ ಪಂಚಾಬರಾವ್ ದೇಶಮುಖ ಅವರ ನೆನಪಿನಲ್ಲಿ ೧೯೯೯ ಡಿಸೆಂಬರ್ ೭ರಂದು ಅಂಚೆ ಚೀಟಿ ಬಿಡುಗಡೆಯಾಗಿದೆ. ಪಂಜಾಬರಾವ್ ದೇಶಮುಖ ಅವರ ಚಿತ್ರ ಇದರಲ್ಲಿದೆ. ಬೆಲೆ ೩ ರು.


  • ೨೦೦೦ನೇ ಇಸವಿಯ ಏಪ್ರಿಲ್ ೨೫ರಂದು ನಾಲ್ಕು ದೇಶೀಯ ಎತ್ತಿನ ತಳಿಯ ಮೇಲೆ ಅಂಚೆ ಚೀಟಿ ಪ್ರಕಟಿಸಲಾಗಿದೆ. ಕರ್ನಾಟಕದ ಹಳ್ಳಿಕಾರ್, ಗುಜರಾತ್‌ನ ಗಿರ್, ಕಂಗ್ರೇಜ್ ಮತ್ತು ತಮಿಳುನಾಡಿನ ಕಂಕಯಮ್ ತಳಿಯ ಪ್ರತ್ಯೇಕ ನಾಲ್ಕು ಅಂಚೆ ಚೀಟಿ ಪ್ರಕಟಿಸಲಾಗಿದೆ. ಮೌಲ್ಯ ಒಂದಕ್ಕೆ ೩ ರು.


  • ೨೦೦೬ರ ಮಾರ್ಚ್ ೩೦ರಂದು ಇಂಡಿಯನ್ ಅಗ್ರಿಕಲ್ಚರ್ ರಿಸರ್ಚ್ ಸೆಂಟರ್‌ನ ಅಂಚೆ ಚೀಟಿ ಬಿಡುಗಡೆಯಾಗಿದೆ.


ಕೃಷಿ ಅಂಚೆ ಚೀಟಿ ಮಾಹಿತಿ ನೀಡಿದವರು ಬೆಳಗಾವಿಯ ಕೆ.ಜಿ.ಕಡೆಕೋಡಿ. ೨೦೦ಕ್ಕೂ ಹೆಚ್ಚು ದೇಶಗಳ ಅಂಚೆ ಚೀಟಿ ಸಂಗ್ರಹಿಸಿದ್ದಾರೆ ಅವರು. ರಾಜ್ಯದ ಹಿರಿಯ ಅಂಚೆ ಚೀಟಿ ಸಂಗ್ರಾಹಕ ಎಂಬ ಹೆಗ್ಗಳಿಕೆಯೂ ಅವರದ್ದು. ಜಗತ್ತಿನ ಅಪರೂಪದ, ಅಮೂಲ್ಯ ಅಂಚೆ ಚೀಟಿಗೆ ಒಡೆಯ. ಹತ್ತಾರು ಪ್ರಶಸ್ತಿ, ಸನ್ಮಾನ. ತಮ್ಮ ಇಳಿ ವಯಸ್ಸಿನಲ್ಲೂ ಹಳೆಯ ಕಾಲದ ವಸ್ತು, ನಾಣ್ಯ ಸಂಗ್ರಹಿಸುವ ಅದಮ್ಯ ಉತ್ಸಾಹ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅಷ್ಟೇ ಅಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ ಕಡೆಕೋಡಿ.
‘ಫಾರೆವರ್ ಯಂಗ್’ ಎಂದು ಅಮೇರಿಕಾ ತನ್ನ ಅಂಚೆ ಚೀಟಿಯಲ್ಲಿ ಕೆ.ಜಿ.ಕಡೇಕೋಡಿ ಭಾವಚಿತ್ರವನ್ನು ಮುದ್ರಿಸಿದೆ.ಅಂಚೆ ಚೀಟಿ, ಹಳೆಯ ವಸ್ತು ಸಂಗ್ರಹದ ಗೀಳಿನಿಂದ ಅಮೇರಿಕಾದ ಅಂಚೆ ಚೀಟಿಯಲ್ಲಿ ಕಾಣಿಸಿಕೊಂಡಿರುವುದು ಅವರ ಹವ್ಯಾಸಕ್ಕೆ ಒಂದು ಗೌರವೇ ಸರಿ.೧೯೬೨ರ ಬಳಿಕ ಅಂಚೆ ಚೀಟಿ ಸಂಗ್ರಹದ ಗೀಳಿಗೆ ಬಿದ್ದ ಅವರು ಇಂದು ಅಂಚೆ ಚೀಟಿ ಇತಿಹಾಸವನ್ನು ಸುಲಲಿತವಾಗಿ ಹೇಳುತ್ತಾರೆ. ಗಾಂಧಿ, ಸ್ವಾತಂತ್ರ್ಯ ಹೋರಾಟ, ಹಣ್ಣು, ಸಂಗೀತ, ಕಲೆ- ಸಾಹಿತ್ಯ ಹೀಗೆ ಒಂದೊಂದು ವಿಷಯದ ಮೇಲೆಯೂ ಅಂಚೆ ಚೀಟಿ ಪ್ರದರ್ಶಿಸುವ ಅವರ ಆಸಕ್ತಿ ಒಂದು ಅದ್ಭುತ.

0 comments: